ಕಟೀಲು ಯಕ್ಷಗಾನ ಮೇಳದ ದೇವಿ ಪಾತ್ರಧಾರಿ ಕಡಂದೇಲು ಪುರುಷೋತ್ತಮ ಭಟ್ ನಿಧನ
ಲೇಖಕರು : ಕನ್ನಡಪ್ರಭ
ಭಾನುವಾರ, ಜುಲೈ 6 , 2014
|
ಯಕ್ಷಗಾನದ ಹಿರಿಯ ಕಲಾವಿದ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಯಕ್ಷಗಾನ ಕಲಾ ಮಂಡಳಿಯ ಶ್ರೀದೇವಿ ಪಾತ್ರಧಾರಿ, ಶತಾಯುಷಿ ಕಡಂದೇಲು ಪುರುಷೋತ್ತಮ ಭಟ್ (100) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
|
ಕಡಂದೇಲು ಪುರುಷೋತ್ತಮ ಭಟ್
|
ಕಟೀಲಿನಲ್ಲಿ ವಾಸವಾಗಿರುವ ಕಡಂದೇಲು ಪುರುಷೋತ್ತಮ ಭಟ್ ಆರಂಭದಲ್ಲಿ ಮೂಲ್ಕಿ, ಕೊರಕ್ಕೋಡು, ಇರಾ, ಕುಂಡಾವು ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿದ್ದು, ಬಳಿಕ ಸುಮಾರು 30 ವರ್ಷಗಳ ಕಾಲ ಕಟೀಲು ಮೇಳದಲ್ಲಿ ಪುರುಷ ಹಾಗೂ ಸ್ತ್ರೀಪಾತ್ರ ನಿರ್ವಹಿಸಿ 1970ರಲ್ಲಿ ನಿವೃತ್ತಿ ಹೊಂದಿದ್ದರು.
ಪೇಜಾವರ ಮಠಾಧೀಶ ವಿಶ್ವೇಶ ತೀರ್ಥರು ಇವರ ರಾಮನ ವನವಾಸದ ಸಂದರ್ಭದಲ್ಲಿನ ಕೈಕೇಯಿ ಪಾತ್ರವನ್ನು ನೋಡಿ ಪ್ರಸಂಗ ಮುಗಿದು ಹೋಗುವ ಸಂದರ್ಭದಲ್ಲಿ ಪುರುಷೋತ್ತಮ ಭಟ್ಗೆ 'ನನಗೆ ಕಲ್ಲು ಸಿಗಲಿಲ್ಲ ಇಲ್ಲದಿದ್ದರೆ ಹೊಡೆಯುತ್ತಿದ್ದೆ' ಎಂದಿದ್ದು ಪಾತ್ರದಲ್ಲಿ ಪುರುಷೋತ್ತಮ ಭಟ್ರ ತನ್ಮಯತೆಯನ್ನು ಎತ್ತಿ ತೋರಿಸುತ್ತಿತ್ತು.
ಭಟ್ಟರು ಕಲಾವಿದನಾಗಿ ಅದರ ಜೊತೆಗೆ ಓಂ ಮಾಯಲೀಲಾ, ಭಾಮಿನಿ ಷಟ್ಪದಿಯಲ್ಲಿ ಶ್ರೀ ದೇವಿ ಸ್ತುತಿ ಕೃತಿ ಪ್ರಕಟಿಸಿದ್ದು ಕಟೀಲು ಶ್ರೀ ದುರ್ಗೆಗೆ ಸಂಬಂಧಿಸಿದ ಭಕ್ತಿಗೀತೆಗಳ ಸಿಡಿ ಬಿಡುಗಡೆಗೊಂಡಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಬೆಳುವಾಯಿ ಶ್ರೀ ಯಕ್ಷದೇವ ಪ್ರಶಸ್ತಿ, ಕಟೀಲು ದೇವಳ ಸೇರಿದಂತೆ ವಿವಿಧ ದೇವಾಲಯಗಳು, ಸಂಘ ಸಂಸ್ಥೆಗಳು ಅವರನ್ನು ಗುರುತಿಸಿ ಗೌರವಿಸಿದೆ.
ಇತ್ತೀಚೆಗೆ ನೂರು ವರ್ಷವನ್ನು ಪೂರೈಸಿರುವ ಅವರನ್ನು ಕಟೀಲಿನಲ್ಲಿ ಅವರ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗಿತ್ತು.
ವೃದ್ಧಾಪ್ಯದಲ್ಲಿ ಕೂಡ ಮನೆಯಿಂದ ಸುಮಾರು 3ರಿಂದ 4 ಕಿ.ಮೀ. ನಡೆಯುತ್ತ ತನ್ನ ಆರೋಗ್ಯವನ್ನು ನೂರರ ವರ್ಷಗಳವರೆಗೆ ಕಾಪಾಡಿಕೊಂಡು ಬಂದಿದ್ದರು. ಮೃತರು ಪುತ್ರಿ ಮತ್ತು ಐದು ಮಂದಿ ಗಂಡು ಮಕ್ಕಳನ್ನು ಅಗಲಿದ್ದಾರೆ.
ಕೃಪೆ :
http://www.kannadaprabha.com
|
|
|